ಆರ್. ಎಸ್. ರಾಜಾರಾಂ (೧೯೩೮-೨೦೨೧) ಕರ್ನಾಟಕ ಹವ್ಯಾಸಿ ರಂಗಭೂಮಿಯ ಪ್ರತಿಭಾವಂತ ಕಲಾವಿದರಲ್ಲಿ ಒಬ್ಬರು. == ಜೀವನ == ರಾಜಾರಾಂ ಅವರು ಕೋಲಾರ ಜಿಲ್ಲೆಯ ಕೆ.ಜಿ.ಎಫ್‌ ನಲ್ಲಿ ಜುಲೈ ೧೦, ೧೯೩೪ರಂದು ಜನಿಸಿದರು. ತಂದೆ ಜಿ.ಎಸ್‌. ರಘುನಾಥರಾವ್‌, ತಾಯಿ ಶಾರದಾಬಾಯಿ. ರಾಜಾರಾಂ ಅವರು ಕರ್ನಾಟಕ ಸರ್ಕಾರದ ಸಚಿವಾಲಯದಲ್ಲಿ ಉದ್ಯೋಗಕ್ಕೆ ಸೇರಿ ಅಧೀನ ಕಾರ್ಯದರ್ಶಿ ಹುದ್ದೆಗೇರಿ ನಿವೃತ್ತಿ ಹೊಂದಿದವರು. == ನಾಟಕ ತಂಡ ಸ್ಥಾಪನೆ == ಮಲ್ಲೇಶ್ವರದ ಸ್ನೇಹಿತರೊಡನೆ ‘ರಸಿಕ ರಂಜನಿ ಕಲಾವಿದರು’ ಸ್ಥಾಪಿಸಿದರು. ಹಣ ಹದ್ದು, ಮಗು ಮದ್ವೆ, ಪಂಚಭೂತ, ಹೋಂರೂಲು, ‘ಅವರೇ ಇವರು- ಇವರೇ ಅವರು’ ಮೊದಲಾದ, ಪರ್ವತವಾಣಿ, ಕೈಲಾಸಂ, ದಾಶರಥಿದೀಕ್ಷಿತ್‌, ಕೆ. ಗುಂಡಣ್ಣನವರ ನಾಟಕಗಳಲ್ಲಿ ಅಭಿನಯಿಸಿದರು. ಸರಸ್ವತಿ ಕಲಾ ನಿಕೇತನ, ಪ್ರಧಾನ ಮಿತ್ರ ಮಂಡಲಿ, ಸುಪ್ರಭಾತ ಕಲಾವಿದರು, ಕಮಲ ಕಲಾ ಮಂದಿರ ಮುಂತಾದ ಸಂಸ್ಥೆಗಳೊಡನೆ ನಿರಂತರ ಒಡನಾಟ ಹೊಂದಿದ್ದರು. ೧೯೬೪ರಲ್ಲಿ ಸಚಿವಾಲಯ ಉದ್ಯೋಗಿಗಳೊಡನೆ ಸ್ಥಾಪಿಸಿದ್ದು ಸಚಿವಾಲಯ ಸಾಂಸ್ಕೃತಿಕ ಸಂಘ. ಆ ಮೂಲಕ ಕೋಲ್ಕತ್ತದಲ್ಲಿ ನಡೆದ ಸಚಿವಾಲಯ ಕ್ಲಬ್‌ ನೌಕರರ ನಾಟಕ ಸ್ಪರ್ಧೆಗಳಲ್ಲಿ ಭಾಗಿಯಾದರು. ಕರ್ನಾಟಕ ಸರಕಾರದ ವಾರ್ತಾ ಮತ್ತು ಪ್ರಚಾರ ಇಲಾಖೆಯ ಸಂಗೀತ ಮತ್ತು ನಾಟಕ ವಿಭಾಗದ ಅನೇಕ ನಾಟಕಗಳಲ್ಲಿಯೂ ನಟಿಸಿದರು == ರಂಗ ಪ್ರಸಿದ್ಧರೊಡನೆ == ರಾಜಾರಾಂ ಅವರು ೧೯೭೨ರಿಂದ ನಟರಂಗ ಮತ್ತು ೧೯೮೩ರಿಂದ ವೇದಿಕೆಯ ರಂಗ ಚಟುವಟಿಕೆಗಳಲ್ಲಿ ತೊಡಗಿ ಸಿ.ಆರ್. ಸಿಂಹ ಅವರ ನಿರ್ದೇಶನದಲ್ಲಿ ಹಲವಾರು ನಾಟಕಗಳಲ್ಲಿ ಅಭಿನಯಿಸಿ ಖ್ಯಾತಿ ಪಡೆದರು. ಇದಲ್ಲದೆ ಬಿ.ವಿ. ಕಾರಂತ, ಎಂ.ಎಸ್‌. ಸತ್ಯು, ಶ್ರೀನಿವಾಸ್‌ ಜಿ. ಕಪ್ಪಣ್ಣ, ಜಯತೀರ್ಥ ಜೋಶಿ, ಸಿ.ಎಚ್‌. ಲೋಕನಾಥ್‌, ಆರ್. ನಾಗೇಶ್‌, ಪ್ರಕಾಶ್‌ ಬೆಳವಾಡಿ ಇವರ ನಿರ್ದೇಶನದ ಮಂಡೋದರಿ, ವಿಗಡವಿಕ್ರಮರಾಯ, ಎಚ್ಚಮನಾಯಕ, ಟಿಪ್ಪುಸುಲ್ತಾನ್‌, ಕಿತ್ತೂರು ಚೆನ್ನಮ್ಮ, ರಕ್ತಾಕ್ಷಿ, ಸದಾರಮೆ, ಕಾಕನ ಕೋಟೆ, ತುಘಲಕ್, ಮೃಚ್ಛಕಟಿಕ, ಸಂಕ್ರಾಂತಿ, ಅಗ್ನಿ ಮತ್ತು ಮಳೆ ಮುಂತಾದ ನಾಟಕಗಳಲ್ಲಿ ಅಭಿನಯಿಸಿದ ಖ್ಯಾತಿ ರಾಜಾರಾಂ ಅವರದ್ದು . ಹೈದರಾಬಾದ್‌, ಚೆನ್ನೈ, ಕೋಲ್ಕತ್ತಾ, ಕಾಶ್ಮೀರ, ಮುಂಬಯಿ, ಚಂಡೀಗಢ ಮುಂತಾದೆಡೆ ನಾಟಕ ಪ್ರದರ್ಶನದಲ್ಲಿ ಭಾಗಿಯಾದರು. == ಕಿರುತೆರೆ-ಹಿರಿತೆರೆ == 'ಭಲೇ ಹುಚ್ಚ' ಚಿತ್ರದ ಮೂಲಕ ಕನ್ನಡ ಚಲನಚಿತ್ರಲೋಕಕ್ಕೆ ಪಾದಾರ್ಪಣೆ ಮಾಡಿದ ರಾಜಾರಾಂ, ಸಿದ್ಧಲಿಂಗಯ್ಯನವರ 'ಕೂಡಿ ಬಾಳಿದರೆ ಸ್ವರ್ಗ ಸುಖ' ಚಿತ್ರದಲ್ಲಿ ತಂದೆಯ ಪಾತ್ರದಲ್ಲಿ ಜನಪ್ರಿಯತೆ ಗಳಿಸಿದರು. ಭಾರ್ಗವ, ಹಾಸ್ಯ ಪ್ರಧಾನ ಪಾತ್ರಗಳ ಮೂಲಕ ಜಗ್ಗೇಶ್ ಚಿತ್ರಗಳಲ್ಲಿ ಖಾಯಂ ಕಲಾವಿದರಾಗಿದ್ದ ರಾಜಾರಾಂ, ಹೊಸ ತಲೆಮಾರಿನ ನಟರಾದ ಶರಣ್ ಮತ್ತು ಮುಂತಾದವರೊಂದಿಗೆ ನಟಿಸಿ ಸೈ ಎನ್ನಿಸಿಕೊಂಡಿದ್ದರು. ಝಿ ಕನ್ನಡದ ಜೊತೆ ಜೊತೆಯಲಿ (ಧಾರಾವಾಹಿ) ಧಾರಾವಾಹಿಯಲ್ಲಿ ಅಭಯ್ ಅಜ್ಜನ ಪಾತ್ರದಲ್ಲಿ ರಾಜಾರಾಂ ಬಲು ಜನಪ್ರಿಯತೆ ಗಳಿಸಿದ್ದರು. == ಪ್ರಶಸ್ತಿ ಗೌರವಗಳು == ರಾಜಾರಾಂ ಅವರಿಗೆ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿಯೂ ಸೇರಿದಂತೆ ಅನೇಕ ಸಂಘ. ಸಂಸ್ಥೆಗಳು, ಪ್ರತಿಷ್ಠಾನಗಳ ಗೌರವಗಳು ಸಂದಿವೆ. == ನಿಧನ == ರಾಜಾರಾಂರವರು ಮೇ ೧೦, ೨೦೨೧ (ಸೋಮವಾರ) ಕೋವಿಡ್‌ನಿಂದ ನಿಧನರಾದರು. == ಮಾಹಿತಿ ಕೃಪೆ == ಕಣಜ